
ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ
ಕೊರೋನಾ ಭೀತಿ ಯಾರೊಬ್ಬರನ್ನೂ ಬಿಟ್ಟಿಲ್ಲ. ಆದರೆ, ಈ ಭೀತಿಯಿಂದಾಗಿ ಮಾನವೀಯತೆಯನ್ನೇ ಮರೆತು ವರ್ತಿಸಿರುವ ಎಷ್ಟೋ ಘಟನೆಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಅದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ನೊಯ್ಡಾದಿಂದ ಶಿಕೋಹಾಬಾದ್ಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಕೊರೋನಾ ಇದೆ ಎಂಬ ಸಂದೇಹದಲ್ಲಿ ಬಸ್ನಿಂದ ಕೆಳಗೆ ತಳ್ಳಲಾಗಿದೆ. ಈ ವೇಳೆ ಆಘಾತಕ್ಕೊಳಗಾದ ಆ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ!
ಈ ಘಟನೆ ನಡೆದಿರುವುದು ಜೂನ್ 15ರಂದು. ಹೃದಯಾಘಾತದಿಂದ ಯುವತಿ ಸಾವನ್ನಪ್ಪಿರುವುದಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಆ ಯುವತಿಯ ಪೋಷಕರು ಬಸ್ನ ಚಾಲಕ ಮತ್ತು ಕಂಡಕ್ಟರ್ ಮೇಲೆ ಆರೋಪ ಮಾಡಿದ್ದು, ನಮ್ಮ ಮಗಳಿಗೆ ಕೊರೋನಾ ಇದೆ ಎಂದು ಬಸ್ನಿಂದ ತಹೊರಹಾಕಿದ್ದರಿಂದಲೇ ಆಕೆಗೆ ಹೃದಯಾಘಾತವಾಗಿದೆ ಎಂದಿದ್ದಾರೆ.
19 ವರ್ಷದ ಅನ್ಶಿಕಾ ಎಂಬ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದಾಕೆ. ಬಸ್ನಲ್ಲಿ ನೊಯ್ಡಾದಿಂದ ಶಿಕೋಹಾಬಾದ್ಗೆ ತೆರಳುತ್ತಿದ್ದ ಆಕೆ ಬಿಸಿಲಿನಿಂದ ಬಸ್ನಲ್ಲೇ ತಲೆಸುತ್ತಿ ಬಿದ್ದಿದ್ದಳು. ಇದರಿಂದ ಆಕೆ ಕೊರೋನಾ ಸೋಂಕಿನಿಂದಲೇ ತಲೆಸುತ್ತಿ ಬಿದ್ದಿದ್ದಾಳೆ ಎಂದುಕೊಂಡ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಆಕೆಯನ್ನು ಬಸ್ನಿಂದ ಹೊರಗೆ ಹಾಕಿದ್ದರು. ಬಸ್ನಿಂದ ಕೆಳಗೆ ಬಿದ್ದ ಆಕೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ. ಆದರೆ, ಮಥುರಾ ಪೊಲೀಸರು ಈ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ ಎಂದಿದ್ದಾರೆ.
ಪೋಸ್ಟ್ ಮಾರ್ಟಂ ವರದಿ ಪ್ರಕಾರ, ಅನ್ಶಿಕಾ ನೈಸರ್ಗಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಅನ್ಶಿಕಾಳ ಅಪ್ಪ ಸುಶೀಲ್ ಕುಮಾರ್ ದೆಹಲಿಯಲ್ಲಿ ಸೆಕ್ಯುರಿಟಿ ಗಾರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕೊರೋನಾ ಕೇಸ್ ಜಾಸ್ತಿಯಾಗಿರುವುದರಿಂದ ಅವರು ತಮ್ಮ ಹೆಂಡತಿ ಮತ್ತು ಮಗಳನ್ನು ನೊಯ್ಡಾದಿಂದ ಊರಿಗೆ ಕಳುಹಿಸಲು ಬಸ್ ಹತ್ತಿಸಿದ್ದರು. ಆ ಬಸ್ನಲ್ಲಿ ಅನ್ಶಿಕಾ ಕುಸಿದುಬಿದ್ದಿದ್ದಳು. ಇದರಿಂದ ಗಾಬರಿಗೊಂಡ ಕಂಡಕ್ಟರ್ ಮತ್ತು ಡ್ರೈವರ್ ಅವರನ್ನು ಮಧ್ಯ ದಾರಿಯಲ್ಲೇ ಬಸ್ನಿಂದ ಹೊರಹಾಕಿದ್ದರು. ಬಸ್ನಿಂದ ಕೆಳಗಿಳಿದ ಸ್ವಲ್ಪ ಹೊತ್ತಿನಲ್ಲೇ ಅನ್ಶಿಕಾ ಸಾವನ್ನಪ್ಪಿದ್ದಾಳೆ. ಬಸ್ನಲ್ಲಿದ್ದವರೆಲ್ಲರೂ ನನ್ನ ಮಗಳಿಗೆ ಕೊರೋನಾ ಇದೆ ಎಂಬ ರೀತಿಯಲ್ಲೇ ವರ್ತಿಸಿದರು ಎಂದು ಅನ್ಶಿಕಾಳ ತಾಯಿ ಆರೋಪಿಸಿದ್ದಾರೆ.