
ವರದಿ: ಸಿರಾಜುದ್ದೀನ್ ಬಂಗಾರ್
ಕೊರೋನಾ ತಡಗಟುವುದಕ್ಕಾಗಿ ಸರ್ಕಾರಿ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿ ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಇರುವ ವ್ಯವಸ್ಥೆ ಮಾಡಿದೆ. ಆದರೆ ಕ್ವಾರಂಟೈನ್ಗೆ ಒಳಗಾಗದ ಕೆಲವರು ಕಿಟಕಿ, ಬಾಗಿಲುಗಳ ಮುರಿದು ಹಾನಿ ಮಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮುದುಗಲ್ ರಸ್ತೆಯ ಹತ್ತಿರವಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ನಲ್ಲಿರಿಸಿ ಅವರಿಗೆ ಊಟ, ವೈದ್ಯಕೀಯ ತಪಾಸಣೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಿದೆ. ಆದರೆ ಕ್ವಾರಂಟೈನ್ನಲ್ಲಿರುವ ಕೆಲವರು ಬೇಕಾಬಟ್ಟಿಯಾಗಿ ವರ್ತಿಸಿ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ವಸತಿ ಶಾಲೆಯ ಕಿಟಕಿ ಬಾಗಿಲುಗಳನ್ನು ಮುರಿದು ಹಾಕಿದ್ದಾರೆ. ಇದು ವಸತಿ ನಿಲಯ ಪಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ವಸತಿ ಶಾಲೆಗೆ ವಿದ್ಯಾರ್ಥಿಗಳು ಬಂದರೆ ಹೇಗೆ ಎಂಬ ಚಿಂತೆ ಎದುರಾಗಿದೆ.
ವಲಸೆ ಕಾರ್ಮಿಕರು ಸೇರಿದಂತೆ ಇನ್ನಿತರರ ಕ್ವಾರಂಟೈನ್ಗೆ ಆಯಾ ಪ್ರದೇಶಗಳ ಹಾಸ್ಟೇಲ್ಗಳನ್ನು ಗುರುತಿಸಿ, ಮೂಲ ಸೌಲಭ್ಯಗಳನ್ನು ಒದಗಿಸಿದೆ. ಆದರೆ ಕ್ವಾರಂಟೈನ್ ಒಳಗಾಗದ ಕೆಲವರು ಸರಕಾರಿ ಆಸ್ತಿಗಳನ್ನು ಹೇಗೆ ಬಳಸಬೇಕು ಎಂಬ ಅರಿವಿಲ್ಲದೇ ಕಿಟಕಿ, ಬಾಗಿಲುಗಳನ್ನು ಹಾಳು ಮಾಡಿದ್ದು, ವಿದ್ಯಾರ್ಥಿಗಳು ವಸತಿ ಶಾಲೆಗೆ ಬರುವಷ್ಟರಲ್ಲಿ ಹೇಗೆ ಸರಿಪಡಿಸಬೇಕು ಎಂಬುದೇ ಪ್ರಶ್ನೆ ಎದುರಾಗಿದೆ. ವಸತಿ ಶಾಲೆಗಳಲ್ಲಿ ಸರ್ಕಾರದ ಆಸ್ತಿಗಳನ್ನು ಹಾನಿ ಮಾಡಿದವರಿಂದಲೇ ದಂಡ ಭರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.