
ಬಂಗಾಳ ಕೊಲ್ಲಿ ಕಡಲ ತೀರವನ್ನು ಅಪ್ಪಳಿಸಲು ಅಂಪನ್ ಚಂಡಮಾರುತ 150 ಕಿಮೀ ವೇಗದಲ್ಲಿ ದಾಂಗುಡಿ ಇಡುತ್ತಿದೆ. ಇಂದು ಮಧ್ಯಾಹ್ನ ಅಥವಾ ಸಂಜೆ ಪಶ್ಚಿಮ ಬಂಗಾಳದ ಡೀಘಾ ಬಳಿ ಅಡಿ ಇಡುವ ನಿರೀಕ್ಷೆ ಇದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ಈಗಾಗಲೇ ಭಾರೀ ಮಳೆ, ಬಿರುಗಾಳಿ ಆರ್ಭಟಿಸಲು ಪ್ರಾರಂಭಿಸಿವೆ. ಈ ಎರಡೂ ರಾಜ್ಯಗಳಲ್ಲಿ ತೀರ ಪ್ರದೇಶದಲ್ಲಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.
ಒಡಿಶಾದ ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವು ಕಡೆ ಬೆಳಗ್ಗೆ 4ರಿಂದಲೇ ಮಳೆ ಪ್ರಾರಂಭವಾಗಿದೆ. ಅಂಪನ್ ಚಂಡಮಾರುತದ ಪೂರ್ವಭಾವಿಯಂತೆ ಪ್ರಬಲ ಗಾಳಿಯೂ ಬೀಸುತ್ತಿದೆ. ಸಮುದ್ರದ ಅಲೆಗಳು ಉಕ್ಕೇರುತ್ತಿವೆ.
ಬಂಗಾಳ ಮತ್ತು ಒಡಿಶಾದಲ್ಲಿ ಎನ್ಡಿಆರ್ಎಫ್ ಪಡೆಯನ್ನು ನಿಯೋಜಿಸಲಾಗಿದೆ. ಬಂಗಾಳದಲ್ಲಿ ಈಗಾಗಲೇ 3 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ವಿವಿಧ ಕರಾವಳಿ ಜಿಲ್ಲೆಗಳಲ್ಲಿ ನೂರಾರು ಪ್ರವಾಹ ಶಿಬಿರಗಳನ್ನು ನಿರ್ಮಿಸಿ ಅಲ್ಲಿ ಜನರನ್ನು ಸೇರಿಸಲಾಗುತ್ತಿದೆ. ಕೊರೋನಾ ವೈರಸ್ ಬಿಕ್ಕಟ್ಟು ಈಗ ಇನ್ನಷ್ಟು ರಕ್ಷಣಾ ಕಾರ್ಯಾಚರಣೆಯನ್ನು ಕ್ಲಿಷ್ಟಗೊಳಿಸಿದೆ. ದೇಶದ ವಿವಿಧೆಡೆಯಿಂದ ವಾಪಸಾದ ವಲಸೆ ಕಾರ್ಮಿಕರನ್ನು ಪ್ರವಾಹ ಕೇಂದ್ರಗಳಲ್ಲೇ ಕ್ವಾರಂಟೈನ್ಗೆ ಇಡಲಾಗಿದೆ. ಈಗ ಸೈಕ್ಲೋನ್ ಬಾಧಿತ ಪ್ರದೇಶಗಳಲ್ಲಿನ ಜನರನ್ನು ಶಾಲೆ, ಹಾಸ್ಟೆಲ್ ಮತ್ತಿತರ ಸ್ಥಳಗಳನ್ನ ಆರಿಸಲಾಗುತ್ತಿದೆ.
ಕೆಲ ಕರಾವಳಿ ಪ್ರದೇಶಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ನಿರ್ಮಾಣವಾಗುತ್ತಿವೆ. ಕೆಲ ಮಟ್ಟದ ಪ್ರದೇಶಗಳಿಗೆ ಸಮುದ್ರ ನೀರು ಉಕ್ಕೇರಿ ಪ್ರವಹಿಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.